ಏನು ಈ "ಬೆಂಗಳೂರು 03-04" ಅಂತ ಕೇಳ್ತೀರ? ಹೇಳ್ತೀನಿ. ಈ ಶೀರ್ಷಿಕೆಯಿಂದ ನನಗೆ ಮೊದಲನೆಯದಾಗಿ ನೆನಪಾಗಿದ್ದು RK ನಾರಾಯಣ ಲಿಖಿತ ಕಥೆಯನ್ನಾದರಿಸಿದ, RK ಲಕ್ಷ್ಮಣ್ ವ್ಯಂಗ್ಯ ಚಿತ್ರಗಳುಳ್ಳ, ದಿ| ಶಂಕರ ನಾಗ್ ನಿರ್ದೇಶನದ "ಮಾಲಗುಡಿ ಡೇಸ್ (MAL-GUDI Days)". ನನ್ನ ಬರಹಕ್ಕೂ ಈ "ಕಿರುಚಿತ್ರ"ಕ್ಕೂ ಏನು ಸಂಬಂಧ? ಇದೆ; ಸಂಬಂಧವಿದೆ. ಈ ಕಿರುಚಿತ್ರದ ಹೆಸರನ್ನು ಸ್ವಲ್ಪ ಗಮನಿಸಿದರೆ ಆ ಸಂಬಂಧವೇನೆಂಬುದು ನಿಮಗೆ ತಿಳಿಯಬಹದು. ಈ ಹೆಸರು, 197೦-90 ರ ವೈಭವಯುತ ಬೆಂಗಳೂರಿನ ಎರಡು ಸುಂದರ 'ಸಾಮ್ರಾಜ್ಯ'ಗಳ ಹೆಸರನ್ನು ಒಳಗೊಂಡಿದೆ. ಅವೇ ’ಮಲ್ಲೆಶ್ವರಂ’ (ಬೆಂ-03) ಹಾಗೂ ’ಬಸವನಗುಡಿ’(ಬೆಂ-04). ಇದು ನನಗೆ ಗಾಳಿಮಾತಾಗಿ ಕೇಳಿ ಬಂದಂತಹದ್ದು. ಆದರೂ ಆ ಗಾಳಿಮಾತು ನಂಬುವಂತಹದೆನಿಸಿತು.
ಕೆಲವೇ ವರ್ಷ/ತಿಂಗಳುಗಳ ಹಿಂದೆ ಬೆಂಗಳೂರಿಗೆ ಬಂದಿರುವ ನಿಮ್ಮಂತಹ ಅನೇಕರಿಗೆ, ’ಮಾಲ್-ಗುಡಿ’ಯ ದರುಶನ ಕಲ್ಪಿಸುವ ಪ್ರಯತ್ನವೇ ಈ ಬರಹದ ಉದ್ದೇಶ. ಅದರಲ್ಲಿ ಸಫಲನಾಗುವೆನೆಂದು ಭಾವಿಸುತ್ತೇನೆ.ಆ 90ರ ಬೆಂಗಳೂರು ನೆನಸಿಕೊಂಡರೆ ಮನಸ್ಸಿಗೆ ಬಹಳ ಖುಶಿ ತರುತ್ತದೆ. 20 ಕ್ಕೆ ಇಳಿಯದ, 25ಕ್ಕೆ ಏರದ ತಾಪಮಾನ. ಎಲ್ಲೆಲ್ಲೂ ಹಚ್ಚ ಹಸಿರು. ಸಾಲು ಮರಗಳಿಂದ ಕೂಡಿದ ರಸ್ತೆಗಳು, ಆ ರಸ್ತೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಓಡಾಡುವ ವಾಹನಗಳು. ಸದಾ "ಚಿಂವ್ ಚಿಂವ್" ಎಂದು ಹಾಡುತ್ತಿದ್ದ ಗುಬ್ಬಚ್ಚಿಗಳು. ಇಂತಹ (ಸ)ಮಿಶ್ರಣ ಎಲ್ಲಾದರೂ ಸಿಕ್ಕೀತೆ ನಿಮಗೆ? ಅದು ಅಸಾಧ್ಯದ ಮಾತು ಎಂದು ಹೇಳಬಲ್ಲೆ. ಅದರಲ್ಲೂ ಬಸವನಗುಡಿ ಹಾಗೂ ಮಲ್ಲೆಶ್ವರಂ ಬಡಾವಣೆಗಳಿಗಂತು ಈ ಸೌಂದರ್ಯಗಳು ’ಕಟ್ಟಿಟ್ಟ ಬುತ್ತಿ’.
ಆ 70ರ ಮನೆಗಳು, ಮನೆಯನ್ನು ಸುತ್ತುವರೆದ ಹೂವಿನ ತೋಟ, ಆ ವರ್ಣರಂಜಿತ ಹೂಗಳು, ಆ ಹೂಪಕಳೆಗಳ ಮೇಲಿನ ಇಬ್ಬನಿ ನೆನಸಿಕೊಂಡರೆ ಮನ ಪುಳಕಗೊಳ್ಳುತ್ತದೆ. ಆ ಮನೆಗಳಲ್ಲಿನ ಸಂಸ್ಕೃತಿ, ಆ ಕನ್ನಡದ ಮೇಲಿನ ಅಗಾಧ ಅಭಿಮಾನ ನಿಜಕ್ಕೂ ನೆನಸಿಕೊಳ್ಳುವಂತಹದ್ದು. ಇದು ಉದ್ಗಾರವೆಂದೆನಿಸಿದರೂ, ಸತ್ಯದ ಮಾತು.MS ಸುಬ್ಬಲಕ್ಷ್ಮಿಯವರ ದನಿಯೊಂದಿಗೆ ಬೆಳಗಾಗುವ ಈ ಮನೆಗಳಲ್ಲಿ, "ಕೌಶಲ್ಯ ಸುಪ್ರಜ ರಾಮ ಪೂರ್ವ ಸಂಧ್ಯ ಪ್ರವರ್ತತೆ" ಎಂದ ಮೇಲೇ ಸುಪ್ರಭಾತ. ಬೆಳಗಿನ ಆ ಸುಮಧುರ ಸಂಗೀತ, ಪೂಜೆಯ ಸಮಯದ ಜಾಗಟೆಯ ಸದ್ದು ನಿದ್ದೆಗೆಟ್ಟು ಎದ್ದವನಿಗೂ ಒಂದು ತರಹದ ನೆಮ್ಮದಿಯನ್ನು ಕೊಡುತ್ತದೆ.
ಈ ಬಸವಗುಡಿಯ ’ಸಾಮ್ರಾಜ್ಯ’ದಲ್ಲಿ 'ನರಸಿಂಹರಾಜ’ನಿಗೆ ಮಂತ್ರಿ ಪಟ್ಟ. ’ನರಸಿಂಹರಾಜ ಕಾಲೋನಿ’ (ಎನ್. ಆರ್. ಕಾಲೋನಿ) ಹೆಸರು ಕಿವಿಗೆ ಬಿದ್ದರೆ ಸಾಕು, ಇಂದಿಗೂ ಈ ಕಿವಿಗಳು ನಿಮಿರುತ್ತವೆ. ಇಲ್ಲಿನ ಆಚಾರ್ಯ ಪಾಠ ಶಾಲೆಯಂತು ಎಲ್ಲರಿಗೂ ಚಿರಪರಿಚಿತ. APS ಎಂದೇ ಹೆಸರು ವಾಸಿಯಾದ ಈ ಶಾಲೆಯ ಕ್ರೀಡಾಂಗಣ ಶಾಲೆಗಿಂತ ಹೆಸರುವಾಸಿ ಎಂದರೆ ತಪ್ಪಾಗಲಾರದು. ಶಾಲೆ ಮುಗಿಸಿ ಈ ಕ್ರೀಡಾಂಗಣದಲ್ಲಿ ಆಡಲು ಹೋದೆವೆಂದರೆ, ಹೊರ ಪ್ರಪಂಚದ ಅರಿವೇ ಇರುತ್ತಿರಲಿಲ್ಲ.
NR ಕಾಲೋನಿ ಹೆಸರು ಬಂದ ಮೇಲೆ ’ಕಹಳೆ ಬಂಡೆ’ ಉದ್ಯಾವನವನ್ನು ಮರೆಯಬಹುದೆ? ಮೂಡಣದಿಂದ ಸೂರ್ಯದೇವನ ದಿನಚರಿ ಶುರುವಾಗುತ್ತಿದ್ದಂತೆಯೆ ಇಲ್ಲಿನ ’ಕಹಳೆ’ ಊದಲಾರಂಭವಾಗುತ್ತದೆ. ಆ ದಟ್ಟ ಹಸಿರು ಛಾವಣಿಯ ರಂದ್ರಗಳಿಂದ ಹರಿದು ಬರುವ ಆ ಎಳೆ ಬಿಸಿಲಿನ ಸರಳುಗಳು, ಅದರ ಮಂದ ಸ್ಪರ್ಷ, ಆ ಚಿಲಿಪಿಲಿಗುಡುವ ಹಕ್ಕಿಗಳ ಸಂಗೀತ ವರ್ಣಿಸಲಾಗದಂತಹದ್ದು. ಇಳಿವಯಸ್ಸಿನಲ್ಲಿದ್ದವರಿಗಂತೂ ಇದು ಸ್ವರ್ಗವೇ ಸರಿ. ಮುಂಜಾನೆಯ ತುಸು ನಡಿಗೆಯ ನಂತರ ಪಕ್ಕದಲ್ಲೆ ಇರುವ ’ಮಲ್ಲಿಕಾರ್ಜುನ’ನ ದರ್ಶನವಾಯಿತೆಂದರೆ, ಅವರ ಆ ದಿನ ಸಾರ್ಥಕವಾದಂತೆ. ಹಾಗೇ ಮುಸ್ಸಂಜೆಯಾಯಿತೆಂದರೆ, ಈ ಉದ್ಯಾನವನ ಪ್ರೇಮಿಗಳ ಗೂಡಾಗಿ ಪರಿವರ್ತನೆಗೊಳ್ಳುತ್ತದೆ. ಪ್ರೇಮಿಗಳು ಬಂದು ಆ ಸ್ವಚ್ಛಂದ ವಾತವರಣದಲ್ಲಿ, ಆ ಮಂದ ಬೆಳಕನ್ನು ಸವೆಯುತ್ತ, ಹಕ್ಕಿಗಳು ತನ್ನ ಕಂದಮ್ಮಗಳಿಗೆ ಪವಡಿಸುವಾಗ ಹಾಡುವ ಆ ಲಾಲಿಯನ್ನು ಕೇಳುತ್ತ ಅಲ್ಲಿ ಕುಳಿತರೆಂದರೆ, ಎಂತಹದೇ ಪ್ರೇಮ, ಗಾಢ ಪ್ರೇಮವಾಗಿ ಬದಲಾಗುವುದರಲ್ಲಿ ಸಂದೇಹವೇ ಇಲ್ಲ.ಕಹಳೆ ಬಂಡೆ ಉದ್ಯಾನವನಕ್ಕೆ ಬಂದು ’ಗಾಂಧಿ ಬಝಾರ್’ಗೆ ಬರದೇ ಹೋಗುವ ಹಾಗೇ ಇಲ್ಲ. ಅವರೆಡಕ್ಕೂ ಬಿಡಿಸಲಾರದ ನಂಟು. ’ಊರಿಗೆ ಬಂದವಳು ನೀರಿಗೆ ಬರದೇ ಹೋಗುವುದೇ?’ಅಂದ ಹಾಗೆ. ಉದ್ಯಾನವನದಲ್ಲಿ ಮನ ತಂಪಾಗಿಸಿಕೊಂಡು, ಗಾಂಧಿ ಬಝಾರಿಗೆ ಅಡ್ಡಾಡಲು ಹೊರಟಿರೆಂದರೆ, ಮತ್ತ್ಯಾವ ಸಿನಿಮ, ಶಾಪಿಂಗ್ ಮಳಿಗೆಯ ಅವಶ್ಯಕತೆಯೇ ಬೀಳುವುದಿಲ್ಲ.
ಗಾಂಧಿ ಬಝಾರ್ ಎಂದ ಕೂಡಲೆ ನೆನಪಾಗುವುದು "ವಿಧ್ಯಾರ್ಥಿ ಭವನ" ಮತ್ತು ಅಲ್ಲಿನ ದೋಸೆ. ಆಹಾ! ದೋಸೆಯ ಸ್ವಾದದ ಬಗ್ಗೆ ಎರಡು ಮಾತಿಲ್ಲ. ಸರದಿಯಲ್ಲಿ ನಿಂತರು ಸೈ, ದೋಸೆ ತಿನ್ನುವ ಅವಕಾಶವನ್ನು ಮಾತ್ರ ಕೈ ಚೆಲ್ಲಬೇಡಿ. ಈ "ವಿಧ್ಯಾರ್ಥಿ ಭವನ" ಕ್ಕೆ ಪೈಪೋಟಿಯಲ್ಲಿ ಇನ್ನೂ ಹಲವಾರು ಉಪಹಾರ ಮಂದಿರಗಳಿವೆ. ಅವುಗಳ ಹೆಸರನ್ನು ಇಲ್ಲಿ ನಮೂದಿಸದಿದ್ದರೆ ಅದೊಂದು ಘೋರ ಅಪರಾದವೇ ಸರಿ. ಪೈಪೋಟಿಯ ಮುಂಚೂಣಿಯಲ್ಲಿ ಬರುವುದು "ಬ್ರಾಹ್ಮಣರ ಕಾಫಿ ಬಾರ್". ಇಲ್ಲಿನ ’ಇಡ್ಲಿ-ವಡೆ’ಗೆ ಸರಿಸಾಟಿಯೇ ಇಲ್ಲ. ಹಾಗೆ ಹೆಸರಿಸುತ್ತ ಹೋದರೆ SLVಯ ಕೇಸರಿ ಬಾತ್, ದ್ವಾರಕ ಹೋಟೆಲ್ ಖಾಲಿ ದೋಸೆ, ಮಾಡರ್ನ್ ಟಿಫಿನ್ ರೂಮ್ ಬಿಸಿ ಬಿಸಿ ಕಾಫಿ, ಮಹಾಲಕ್ಷ್ಮಿ ಟಿಫನ್ ರೂಮ್ ನಂತಹ ಹಲವಾರು ಉಪಾಹಾರ ದರ್ಶನಿಗಳಿವೆ ಹಾಗೂ ಅವುಗಳದ್ದೇ ವಿಶೇಷತೆಗಳಿವೆ.ಕಹಳೆ ಬಂಡೆಗೆ ಒಂದೆಡೆಯಲ್ಲಿ ಗಾಂಧಿ ಬಝಾರ್ ಆದರೆ ಮತ್ತೊಂದೆಡೆ, ಸಾವಿರಾರು ಜನರನ್ನು ದಿನನಿತ್ಯ ತನ್ನ ಸಾನಿಧ್ಯಕ್ಕೆ ಬರಮಾಡಿಕೊಳ್ಳುವ ದೊಡ್ಡ ಗಣಪ. ಆ ಬೃಹದಾಕಾರ ನಿಜವಾಗಲು ಆಕರ್ಶಕ. ಅವನ ದರ್ಶನ ಪಡೆದು ೧೦-೨೦ ಮೆಟ್ಟಿಲು ಹತ್ತಿದರೆ ಸಾಕು, ಈ ಬೆಂ-04 ರ ಕಾರಣಕರ್ತನ ದರುಶನವಾಗುತ್ತದೆ. ಅದೇ, ದೊಡ್ಡ ಬಸವನ ದೇವಸ್ಥಾನ. ಒಂದೇ ಕಲ್ಲಿನಲ್ಲಿ ಕೆತ್ತಲ್ಪಟ್ಟ ಈ ಬೃಹದ್ ಬಸವನಗುಡಿ, ಯಾತ್ರಿಕರಿಗೆ ಬೆಂಗಳೂರಿನಲ್ಲಿ ನೋಡಲೇ ಬೇಕಾದ ಸ್ಥಳ. ಈ ಬಸವನ ಶಿರದ ಮೇಲೆ ಒಂದು ತ್ರಿಶೂಲವಿದೆ. ವರ್ಷಗಳ ಹಿಂದೆ ಈ ಬಸವನ ಮೂರ್ತಿ ಬೆಳೆಯುತ್ತಿತ್ತಂತೆ. ಅದಕ್ಕೆ ಕಡಿವಾಣ ಹಾಕಲು ಈ ತ್ರಿಶೂಲ ಎಂಬ ನಂಬಿಕೆ ಇದೆ. ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ನೀವು ಈತನ ದರುಶನ ಮಾಡಲು ಬಂದರೆ ನಿಬ್ಬೆರಗಾಗಿ ನಿಲ್ಲುವುದರಲ್ಲಿ ಆಶ್ಚರ್ಯವೇ ಇಲ್ಲ. ಅಂದು ಕಡಲೆಕಾಯಿ ಪರಿಶೆ. ಅಪಾರ ಜನಸ್ತೋಮದ ನಡುವಿನಲ್ಲಿ ಈ ಬಸವ ಮೆರೆಯುತ್ತಿರುತ್ತಾನೆ. ಎಲ್ಲೆಲ್ಲೂ ಹಬ್ಬದ ವಾತಾವರಣ. ಎರಡು ದಿನ ನಡೆಯುವ ಈ ಜಾತ್ರೆಗೆ ನನ್ನ ಹಾಜರಾತಿ ತಪ್ಪಿದ್ದಲ್ಲ.
ಈ ಐಟಿ ಯುಗದಲ್ಲೂ ಈ ಪ್ರದೇಶಗಳ ವೈಭವ ಇನ್ನೂ ಮಾಸಿಲ್ಲವೆಂದರೆ ತಪ್ಪಾಗಲಾರದು. ಆ ಸಂಸ್ಕೃತಿ, ಆ ಪ್ರಕೃತಿ ಸೌಂದರ್ಯ ಇನ್ನೂ ನೆಲೆಸಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಬೆಂಗಳೂರಿನ ಯಾವುದೇ ಮೂಲೆಗೆ ಹೋದರೂ ಇವೆರಡರಂತಹ ಬಡಾವಣೆಗಳು ನೋಡ ಸಿಗದು ಎನ್ನುವ ಮಾತನ್ನು ರಾಜರೋಷವಾಗಿ ಹೇಳಬಲ್ಲೆ. ಆ 90ರ ಬೆಂಗಳೂರನ್ನು ನೋಡಬಯಸುವವರು ಈ ಎರಡು ಬಡಾವಣೆಗಳಿಗೆ ಬಂದರೆ ಸಾಕು, ಆ ’ಸೌಂದರ್ಯ’ ನೋಡ ಸಿಗದೇ ಹೋದರೂ, ಅದರ ಅಣುಕಿನ ನಿದರ್ಶನ ಖಂಡಿತವಾಗಿಯೂ ಆಗುವುದು.ಬಸವನಗುಡಿಯ ನಿವಾಸಿಯಾದ್ದರಿಂದ ಇದರ ಬಗ್ಗೆ ಇಷ್ಟೆಲ್ಲ ಬರೆಯಲು ಸಾಧ್ಯವಾಯಿತು. ಆಗಲೋ, ಈಗಲೋ ಒಮ್ಮೆ ಮಲ್ಲೇಶ್ವರಂಗೆ ಹೋದ ನನಗೆ ವೀಣಾ ಸ್ಟೋರ್ಸ್, ಮಲ್ಲೇಶ್ವರಂ 8ನೇ ಅಡ್ಡರಸ್ತೆಯಲ್ಲಿರುವ ಮಾರುಕಟ್ಟೆಗಳು ಬಿಟ್ಟರೆ ಹೆಚ್ಚಿನ ಜಾಗಗಳ ಬಗ್ಗೆ ಮಾಹಿತಿ ಇಲ್ಲ. ಆದರೂ ಅಲ್ಲಿ ಹೋದಾಗಲೆಲ್ಲ ಬಸವನಗುಡಿಯಲ್ಲೇ ಇದ್ದ ಅನುಭವವಾಗುತ್ತಿದ್ದುದೆನ್ನುವುದು ಸತ್ಯ. ತಿಳಿಯದೆ ಮಲ್ಲೇಶ್ವರಂ ಬಗ್ಗೆ ಹೆಚ್ಚು ಬರೆಯಲಾರೆ. ಈ ಲೇಖನದ ಓದುಗರಲ್ಲಿ ಯಾರಾದರೊಬ್ಬರು ಈ ’ಅಪೂರ್ಣ’ವನ್ನು ’ಸಂಪೂರ್ಣ’ ಮಾಡುತ್ತೀರೆಂದು ಆಶಿಸುತ್ತೇನೆ.
ಬಸವನಗುಡಿ ಮತ್ತು ಮಲ್ಲೇಶ್ವರಂ ನ ’ಅಂದ’ ಸವಿಯುದಕ್ಕೆ ನೀವೆಲ್ಲ ಬರುತ್ತೀರಲ್ಲ? ಅದರ ಅನುಭವ ಹೇಗಿತ್ತು ಎನ್ನುವುದನ್ನು ತಪ್ಪದೇ ನನಗೆ ತಿಳಿಸಿ.ಜೈ ಕರ್ನಾಟಕ ಮಾತೆ...
ಕೊಲ್ಲೆ
